ಚಿಟ್ಟಾಣಿ ರಾಮಚಂದ್ರಗೆ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಒಕ್ಟೋಬರ್ 25 , 2013
|
ಯಕ್ಷಗಾನದ ಪರಮೋಚ್ಛ ಕಲಾವಿದ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಪದ್ಮಶ್ರೀ ಪುರಸ್ಕೃತ ಯಕ್ಷಗಾನ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆ ಇವರಿಗೆ ಹಾಗೂ ಯಕ್ಷಗಾನದ ಸರ್ವ ಸಮರ್ಥ ಕಲಾವಿದ ಕೆರೆಮನೆ ಗಜಾನನ ಹೆಗಡೆ ಹೆಸರಿನಲ್ಲಿ ಸ್ಥಾಪಿತವಾದ ಪ್ರಶಸ್ತಿ ಹಾಸ್ಯ ಚಕ್ರವರ್ತಿ ಕುಂಜಾಲು ರಾಮಕೃಷ್ಣ ನಾಯಕ್ ಇವರಿಗೆ ಘೋಷಿಸಲಾಗಿದೆ ಎಂದು ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇದರ ನಿರ್ದೇಶಕ ಶಿವಾನಂದ ಹೆಗಡೆ ಕೆರೆಮನೆ ತಿಳಿಸಿದ್ದಾರೆ.
2013ರ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ರಾಷ್ಟ್ರೀಯ ಪ್ರಶಸ್ತಿಯನ್ನು ಬಡಗು ತಿಟ್ಟಿನ ಮೇರು ನಟ ಚಿಟ್ಟಾಣಿ ರಾಮಚಂದ್ರ ಹೆಗಡೆ ಇವರಿಗೆ ನೀಡಲು ಮಂಡಳಿ ನಿರ್ಧರಿಸಿದ್ದು, ಈ ಪ್ರಶಸ್ತಿ ರು. 10 ಸಾವಿರ ಮೊತ್ತ ಪ್ರಶಸ್ತಿ ಪತ್ರ ಮತ್ತು ಗೌರವ ಒಳಗೊಂಡಿದೆ. ಈ ಪ್ರಶಸ್ತಿ ಸಕಲ ಕಲಾಕ್ಷೇತ್ರಕ್ಕೆ ವಿಸ್ತಾರಗೊಂಡಿದ್ದು, 2014 ಜನವರಿ 18ರಿಂದ 22ರ ವರೆಗೆ ಗುಣವಂತೆಯ ಯಕ್ಷಾಂಗಣದಲ್ಲಿ ನಡೆಯಲಿರುವ 5 ದಿನಗಳ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ಸಂದರ್ಭ 2014 ಜ. 18ರಂದು ಆಗಮಿಸುವ ಖ್ಯಾತ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಕಳೆದ 2012ರಿಂದ ಮಂಡಳಿಯ ಸರ್ವ ಸಮರ್ಥ ಯಕ್ಷಗಾನ ಕಲಾವಿದ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮಿಂಚಿ ಮರೆಯಾದ ಕೆರೆಮನೆ ಶಿವರಾಮ ಹೆಗಡೆಯವರ ಕಿರಿಪುತ್ರ ಕೆರೆಮನೆ ಗಜಾನನ ಹೆಗಡೆ ಇವರ ಹೆಸರಿನಲ್ಲಿ ಪ್ರಶಸ್ತಿ ಘೋಷಿಸಿದ್ದು, ಯಕ್ಷಗಾನ ಕ್ಷೇತ್ರಕ್ಕೆ ಮೀಸಲಾದ ಪ್ರಶಸ್ತಿ ರು. 5 ಸಾವಿರ ನಗದು ಪ್ರಶಸ್ತಿ ಪತ್ರ, ಶಾಲು ಇತ್ಯಾದಿ ಗೌರವ ಹೊಂದಿದೆ.
2013ರ ಕೆರೆಮನೆ ಗಜಾನನ ಹೆಗಡೆ ಪ್ರಶಸ್ತಿಯನ್ನು ಮಂಡಳಿ ಬಡಗುತಿಟ್ಟಿನ ಹಾಸ್ಯ ಚಕ್ರವರ್ತಿ ಕುಂಜಾಲು ರಾಮಕೃಷ್ಣ ನಾಯಕ್ ಇವರಿಗೆ ನೀಡಲಿದೆ. ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ 2014 ಜನವರಿ 22ರಂದು ಆಗಮಿಸುವ ಗಣ್ಯರು ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದೆ.
ರಾಷ್ಟ್ರೀಯ ನಾಟ್ಯೋತ್ಸವ- 5 : ಯಕ್ಷಗಾನದ ಅಸಾಮಾನ್ಯ, ತುಲನಾತೀತ ಮೇರುನಟ ಯಕ್ಷಗಾನ ಕುರಿತು ಸಮಗ್ರ ಅರಿವು, ವಿದ್ವತ್, ಸೃಜನಶೀಲತೆ ಬೆಳೆಸಿಕೊಂಡು, ಯಕ್ಷಗಾನ ರಂಗಭೂಮಿಗೆ ಅನನ್ಯ ಕೊಡುಗೆ ನೀಡಿರುವ ಜೊತೆಗೆ ಸಂಘಟಕರಾಗಿ, ಕಲಾವಿದರಾಗಿ, ಚಿಂತಕರಾಗಿ, ಕಲೆಯ ಶುದ್ಧ ಹಾಗೂ ಸೌಂದರ್ಯದ ಪ್ರತೀಕವಾಗಿ ಬದುಕಿದ, ಯಕ್ಷಗಾನಕ್ಕಾಗಿ ತನ್ನ ಬದುಕನ್ನು ಸಮರ್ಪಿಸಿಕೊಂಡು ಅದರ ವಿಸ್ತಾರಕ್ಕೆ ದುಡಿದ, ದೇಶ, ವಿದೇಶಗಳಲ್ಲಿ ಕಲೆ ಮೆರೆಸಿ, ರಾಜ್ಯ, ರಾಷ್ಟ್ರ ಪ್ರಶಸ್ತಿಗೆ ಭಾಜನರಾದ ಯಕ್ಷಗಾನ ತರಬೇತಿ ಕೇಂದ್ರ ರಂಗಮಂದಿರ ನಿರ್ಮಿಸಿದ ಮಂಡಳಿಯ ಹಿಂದಿನ ನಿರ್ದೇಶಕ ದಿ. ಕೆರೆಮನೆ ಶಂಭು ಹೆಗಡೆ ನೆನಪಿನಲ್ಲಿ ಮಂಡಳಿ 4 ವರ್ಷಗಳಿಂದ 5 ದಿನಗಳ ರಾಷ್ಟ್ರೀಯ ನಾಟ್ಯೋತ್ಸ ಆರಂಭಿಸಿಕೊಂಡು ಬಂದಿದ್ದು, ಮಂಡಳಿ ನಿರಂತರ ನಡೆಸಿಕೊಂಡು ಬರುತ್ತಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ 2014ರ ಜನವರಿ 18ರಿಂದ 22ರ ವರೆಗೆ ಹೊನ್ನಾವರ ತಾಲೂಕಿನ ಗುಣವಂತೆಯ ಯಕ್ಷಾಂಗಣದಲ್ಲಿ ಜರುಗಲಿದೆ.
ನಾಟ್ಯೋತ್ಸವದಲ್ಲಿ ದೇಶದ ಶ್ರೇಷ್ಠ ಕಲಾ ಪರಿಣಿತರು, ಚಿಂತಕರು ಭಾಗವಹಿಸಲಿದ್ದಾರೆ. ಸಂಗೀತ ನೃತ್ಯ ಜಾನಪದ ಮುಂತಾದ ವಿವಿಧ ಪ್ರಕಾರಗಳ ವಿಶಿಷ್ಟ ಕಲಾ ತಂಡಗಳು ಭಾಗವಹಿಸುವ ನಾಟ್ಯೋತ್ಸದಲ್ಲಿ ಕಲಾವಿದರಿಗೆ ಸನ್ಮಾನ, ವಿಚಾರ ಗೋಷ್ಠಿ, ನೃತ್ಯ, ಪ್ರಾತ್ಯಕ್ಷಿಕೆ ಮುಂತಾದವು ನಡೆಯಲಿದೆ ಎಂದು ಮಂಡಳಿ ನಿರ್ದೇಶಕ ಶಿವಾನಂದ ಹೆಗಡೆ ತಿಳಿಸಿದ್ದಾರೆ.
ಕೃಪೆ : http://vijaykarnataka.indiatimes.com
|
|
|